Sunday, September 10, 2023

ಈ ಕ್ಷಣದ ಕವಿತೆ ೧

ಅದು,
ನಡು ರಾತ್ರಿಯಲ್ಲಿ ಯಾವುದೋ
ಹಳೆಯ ಹಾಡಿನ ಎರಡನೇ ಸಾಲು 
ನೆನಪಾದಂತೆನೀವು 
ತಾಸುಗಟ್ಟಲೆ ತಲೆಯಲ್ಲೇ 
ಹುಡುಕುತ್ತೀರಿ, ಊಹ್ಞೂಂ

ಯಾವುದೋ ಗಡಿಬಿಡಿಯ 
ಗಲಿಬಿಲಿಯಲ್ಲಿ
ಮೊದಲು ಸಾಲು ಧುತ್ತನೆ
ಸಾಕ್ಷಾತ್ಕಾರವಾಗುತ್ತದೆ
ಎರಡು, ಮೂರನೇ ಸಾಲು
ಅಸ್ಪಷ್ಟ ಎನಿಸಿದರೂ
ನಿಮಗೆ ಜ್ಞಾನೋದಯದ ಸಂತಸ

ಒಂದರಘಳಿಗೆಯಷ್ಟೇ
ಸಂತೆಯಲ್ಲಿ ಮಗನನ್ನು ಕಳೆದುಕೊಂಡಂತೆ
ಅದರ ರಾಗಕ್ಕಾಗಿ ತಡಕಾಡುತ್ತೀರಿ
ಗಂಟಲಲ್ಲಿರುವ ಕೆಲವು ಅಸ್ಪಷ್ಟ, ಪರಿಚಿತ
ಟ್ಯೂನುಗಳ ಜೊತೆ, 
ಹೊಸಹಾಡನ್ನು ಮಲಗಿಸಿ 
ತಾಳೆಮಾಡುತ್ತೀರಿ
ಊಹ್ಞೂಂ.

ಕೊನೆಯುಸಿರಿನ ಘಳಿಗೆಯಲ್ಲೂ
ನಿಮಗದರ ರಾಗ ಹೊಳೆದೀತು
ಆದರೆ,
ಅದನ್ನು ಹಾಡಿದವರಾರು?

ಈ ಕ್ಷಣದ ಕವಿತೆ ೨

ಅವಳ ಕಣ್ಣುಗಳಲ್ಲಿ
ವೈಶಾಖ ಸೋರಗುತ್ತದೆ
ಬಾಯಾರಿದ ಒಣ ಭೂಮಿಯಂತೆ
ನಾನು ಆಕಾಶ ನೋಡುತ್ತೇನೆ
ಅವಳ ಕಣ್ರೆಪ್ಪೆ ಅಡ್ಡಬರುತ್ತದೆ

ಕ್ರೂರ ಮೇ ಬಿಸಿಲು ಫಳಫಳಿಸುತ್ತದೆ
ಅವಳ ಕಣ್ಣುಗಳಲ್ಲದು ಪ್ರತಿಫಲಿಸುತ್ತದೆ
ಅವಳು ಸೂರ್ಯನನ್ನು ನೆಟ್ಟ ಕಂಗಳಲ್ಲಿ
ನೋಡಿ ಅಣಕಿಸುತ್ತಾಳೆ

ನಾನು ಅವಳನ್ನು ನೋಡುತ್ತಾ
ಬೆವರೊರೆಸಿಕೊಳ್ಳುತ್ತೇನೆ
ಅವಳು ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ,
ಮತ್ತೆ ವೈಶಾಖದ ಸುಡುಬಿಸಿಲು
ನನ್ನಮೇಲೆ ದಾಳಿಯಿಡುತ್ತದೆ

ನಾನು ಮರಳಿನ ಮೇಲೇನೋ 
ಬರೆಯಬೇಕೆಂದುಕೊಳ್ಳುತ್ತೇನೆ,
ಅವಳು ಕೋಪಿಸಿಕೊಳ್ಳುತ್ತಾಳೆ
ಅರೆಕ್ಷಣ,
ಇಬ್ಬರಿಗೂ ಜ್ಞಾನೋದಯವಾಗುತ್ತದೆ
ಅವಳು ಬರೆಯಲು ಹೇಳುತ್ತಾಳೆ
ನಾನು ಬರೆಯುವುದಿಲ್ಲ.

ಈ ಕ್ಷಣದ ಕವಿತೆ ೩

ವೈಶಾಖದ ಮಳೆ
ಮಳೆಗಾಲದ ನೆನಪುಗಳ ಎಚ್ಚರ ಅದು
ಇದು ದೊಡ್ಡ ಹನಿಯೋ ಸಣ್ಣ ಹನಿಯೋ ತಿಳಿಯದಂಥ ದ್ವಂದ್ವ
ಕಳೆದ ಮಳೆಗಾಲಗಳ ಅಸ್ಪಷ್ಟ ಪ್ರತಿನಿಧಿ

ವೈಶಾಖದ ಮಳೆ
ಹಸಿಮೆಣಸು ತಿಂದಾಗ ಸಿಕ್ಕ ಸಿಹಿನೀರು
ಅದು ಆರ್ದ್ರ
ಅದೊಂದು ಸಚಿತ್ರ ವಿಸ್ಮಯ

ವೈಶಾಖದ ಮಳೆ
ಒಂದು ಬಿಡುಗಡೆಯ ಆಸೆ
ಅದು ತೀರಲು ಶುರುವಾದ ಆದರೆ ತೀರದ ದಾಹ

ವೈಶಾಖದ ಮಳೆ 
ಸುಡುವ ನಡು ಮಧ್ಯಾಹ್ನಗಳಿಂದ ನಮ್ಮನ್ನೊಂದುಕ್ಷಣ ಕಾಯುವ
ಆದರೆ ಮತ್ತದೇ
ಬೇಗೆಯ ಪ್ರಪಂಚಕ್ಕೆ ದೂಡಿ ಓಡಿಹೋಗುವ ನಿರ್ದಯ ಕ್ರೂರಿ

ಈ ಕ್ಷಣದ ಕವಿತೆ ೬

ನನ್ನ ಬಳಿ ಒಂದು 
ಕವಿತೆಯಿದೆ.
ಬಹಳ ಇಷ್ಟದಲ್ಲಿ
ಸಾಕಿ ಬೆಳೆಸಿದ ಕವಿತೆಯದು.

ಸೆಖೆಗಾಲದಲ್ಲಿ
ಅಚಾನಕ್ಕು ಮಳೆಯಾದಾಗ,
ಮರಳಮೇಲೆ ಕುಳಿತು
ತಾಸುಗಟ್ಟಲೆ
ಅಲೆಗಳು ಒಂದಾದಮೇಲೊಂದು
ಬಂದುಹೋಗುವುದನ್ನು ಕಾಣುವಾಗ,
ಕಣ್ಮುಚ್ಚಿ ಮುಲ್ತಾನಿಯಲ್ಲೋ, ಶುದ್ಧ ಕಲ್ಯಾಣದಲ್ಲೋ ಕಳೆದುಹೋದಾಗ,
ಮಳೆಗಾಲ ಕಳೆದ 
ಶುಭ್ರಮುಗಿಲಿನ ನಗು ಕಂಡಾಗ,
ಆಕೆ ನಿರಾಯಾಸವಾಗಿ
ಕೂದಲನ್ನು ಮೇಲಕ್ಕೆತ್ತಿ ಗಂಟಿಕ್ಕಿ
ನಕ್ಕಾಗ,
ಹೀಗೆ ಆಗಾಗ 
ಅದು ಇಂಚಿಂಚು ಬೆಳೆದು
ಚಂದವಾಗಿದೆ.

ನನ್ನಬಳಿ ಒಂದು ಚಂದದ
ಕವಿತೆಯಿದೆ
ಹಳೆಗಾಲದ ಕಥೆಗಳ ಹಾಗೆ
ಏಳು ಸುತ್ತಿನ ಕೋಟೆಯೊಳಗಿನ
ಪಂಜರದಲ್ಲಿ ಮಾಂತ್ರಿಕನ
ಜೀವದ ಗುಟ್ಪು ಇರುವಹಾಗೇ
ಈ ಕವಿತೆಯೊಳಗೇ 
ನನ್ನ ರಹಸ್ಯವಿದೆ

ನನ್ನ ಬಳಿ ಒಂದು 
ಕವಿತೆಯಿದೆ
ಆದರೆ
ನಾನದನ್ನು ಯಾರಿಗೂ
ಕೊಡಲಾರೆನಷ್ಟೇ.

ಈ ಕ್ಷಣದ ಕವಿತೆ ೪

ಅವಳು
ಬೆವರೇಳಿಸುವ ಮುಲ್ತಾನಿ
ಮೈಮರೆಸುವ ಕಲ್ಯಾಣಿ
ಆವರಿಸಿಕೊಳ್ಳುವ ಶುದ್ಧ ಕಲ್ಯಾಣ
ಪ್ರವಹಿಸುವ ಜೋಗ
ನಿದ್ರೆ ಕಸಿಯುವ ಮಾಲಕೌಂಸ
ಬಡಿದೆಬ್ಬಿಸುವ ತೋಡಿ
ಭಾವದಲ್ಲಿ ಮುಳುಗಿಸುವ ಭೈರವಿ
ಅವಳು

Thursday, July 6, 2023

ಈ ಕ್ಷಣದ ಕವಿತೆ ೫




ಕೆಲವೊಮ್ಮೆ ಕವಿತೆಗಳು
ಕೈಮೀರಿ ಬೆಳೆಯುತ್ತವೆ
ಶಬ್ಧಗಳು ಕೈಗೆ ಸಿಗದಂತೆ
ತಪ್ಪಿಸಿಕೊಂಡು ಒಮ್ಮೆಲೇ
ಧುತ್ತನೆ ಪ್ರತ್ಯಕ್ಷವಾಗಿ ಅಣಕಿಸುತ್ತವೆ.

ಒಮ್ಮೊಮ್ಮೆ, ಅವು
ವಿಪರೀತ ಅನರ್ಥಗಳನ್ನು ಕೊಟ್ಟು ಕಾಡುತ್ತವೆ
ಇನ್ನು ಕೆಲವೊಮ್ಮೆ, ಅರ್ಥವನ್ನೇ ಅಡಗಿಸಿಟ್ಟು
ಉಸಿರುಕಟ್ಟಿಸುತ್ತವೆ

ಒಂದೊಂದೇ ಅಕ್ಷರಗಳು
ಸಾಲುಹಚ್ಚಿ
ಬೆರಳುಗಳಮೇಲೆ ನಿಂತು
ಕಾಯತೊಡಗುತ್ತವೆ
ಜೀವಾವದಿ ಶಿಕ್ಷೆಯಿಂದ ಇನ್ನೇನು ಹೊರಬೀಳುತ್ತಿರುವ ಖೈದಿಯಂತೆ ಚಡಪಡಿಸುತ್ತವೆ
ಯಾರಬಗ್ಗೆಯೋ ಏನೊ!

ನನ್ನ ಕವಿತೆ ನಿಮ್ಮ ಕಣ್ಣಿಗೆ ಕಾಣುವುದಿಲ್ಲ,
ಅವನ್ನು ನನ್ನ ಕಣ್ಣಿನಿಂದ ಓದಿದ ದಿನ ನಿಮಗೆ ದೃಷ್ಟಿ ಬರುತ್ತದೆ.