Sunday, November 24, 2024

ಈ ಕ್ಷಣದ ಕವಿತೆ ೭

ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ
ಕವಿತೆ ಬರೆಯುವುದೊಂದುದೊಡ್ಡವಿಷಯವೇಅಲ್ಲ.
ಹೀಗೆ,
ಏನೇನೋಬೇಕಾದರೂ ಪದಗಳಮಧ್ಯದಲ್ಲೊಂದಿಷ್ಟು ಜಾಗವನ್ನೂಬಿಡದೇ ಅರ್ಥಹೀನಶಬ್ದಗಳನ್ನೂ ಒಟ್ಟಿಗೆ ಪೋಣಿಸಿಟ್ಟುಬಿಟ್ಟರೂ ಸಾಕಾದೀತು!

ಆದರೆ,
ಇದನ್ನು ಕವಿತೆಎಂದುಕರೆದು ನಾಲ್ಕುಜನರುಓದುವಹಾಗೆ ಹೊರಹಾಕುವುದು ಭಯಂಕರದವಿಷಯವೇಹೌದು

ಬೇಕಾದರೆನೋಡಿ, 
ಇತ್ತೀಚೆಗೆನನ್ನಂತಹ ಕಂಡಕಂಡವರೂ
ತಮಗೆತೋಚಿದಹಾಗಿಬರೆದು
ಇದೂಒಂದುಕವಿತೆಯೆಂದು ನಂಬಿಸುತ್ತಾರೆ!
ನಂಬುತ್ತಾರೆ!!

Saturday, June 8, 2024

ಅರ್ಭುತನ ಬೆನ್ನತ್ತಿ.

ಕೆಲವು ವರ್ಷಗಳ ಹಿಂದೆ.........

    ನಾನು ಕನ್ನಡದ ಸುದ್ದಿ ಪತ್ರಿಕೆ ಒಂದಕ್ಕೆ ಕೆಲಸ ಮಾಡುತ್ತಿದ್ದ ಕಾಲ. ಒಂದು ಭಾನುವಾರ ಮಧ್ಯಾಹ್ನ ಊಟ ಮಾಡಿ ಮಲಗಿ ಕಣ್ಮುಚ್ಚಿದ್ದಷ್ಟೆ, ಟೆಲಿಫೋನು ರಿಂಗಾಗಿತ್ತು. ಎತ್ತಿ ಮಾತಾಡಿದರೆ ಆ ಕಡೆಯಿಂದ ಗೆಳೆಯ ಗೊಪಿ. ಸ್ವಲ್ಪ ಅರ್ಜೆಂಟಿನಲ್ಲಿದ್ದ. ಒಂದು ಅಪರೂಪದ ಸುದ್ದಿ ಇದೆಯೆಂದೂ, ಇನ್ನೂ ಬೇರೆ ಯಾವುದೇ ಮಾಧ್ಯಮದವರಿಗೂ ಈ ವಿಚಾರ ತಿಳಿದಿಲ್ಲವೆಂದೂ ಮತ್ತು ನಾನು ಆದಷ್ಟು ಬೇಗ ಅವನು ಹೇಳುವ ಜಾಗಕ್ಕೆ ಹೋದಲ್ಲಿ ಒಂದು ಒಳ್ಳೆಯ ಸ್ಟೋರಿ ಕವರ್‌ ಮಾಡಬಹುದೆಂದು ಹೇಳಿದ. ಅದರ ನಂತರ ಅವನು ಕೊಟ್ಟ ವಿವರಗಳು ಅತ್ಯಂತ ಕುತೂಹಲಕಾರಿಯಾಗಿದ್ದವು. ಮೈಸೂರಿನ ಒಂದು ಹಳ್ಳಿಯ ಕಾಳಿಂಗ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿತ್ತು. ಅವರ ಮನೆಯ ಪುಣ್ಯಕೋಟಿ ಎಂಬ ಹಸು ದೊಡ್ಡಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಅರ್ಭುತ ಎನ್ನುವ ಹುಲಿಯೊಂದು ಅದನ್ನು ಅಡ್ಡಗಟ್ಟಿ ತಿನ್ನುವುದಾಗಿ ಹೇಳಿತಂತೆ, ಆಗ ಪುಣ್ಯಕೋಟಿಯು ತನಗೆ ಮನೆಯಲ್ಲಿ ಚಿಕ್ಕ ಕರುವಿದೆ, ಅದಕ್ಕೆ ಹಾಲು ಕುಡಿಸಿ ಮತ್ತೆ ನಿನ್ನಲಿಯೇ ಬರುತ್ತೇನೆ, ಆಗ ನೀನು ನನ್ನನ್ನು ತಿನ್ನಬಹುದು, ಈಗ ಹೋಗಲು ಅವಕಾಶ ಕೊಡು ಎಂದು ಬೇಡಿಕೊಂಡಿತಂತೆ, ಈ ಮಾತನ್ನು ನಂಬಿದ ಹುಲಿ ಪುಣ್ಯಕೋಟಿಯನ್ನು ಬಿಟ್ಟು ಕಳುಹಿಸಿತಂತೆ. ಇಷ್ಟಕ್ಕೆ ಮುಗಿದಿದ್ದರೆ ಕಥೆಯನ್ನು ಜಾಣ ಹಸು ಎಂದೋ, ಮೂರ್ಖ ಹುಲಿ ಎಂದೋ ಕರೆದುಬಿಡಬಹುದಿತ್ತು ಆದರೆ, ಕಥೆಗೆ ಟ್ವಿಸ್ಟು ಬರುವುದೇ ಇಲ್ಲಿ. ಕರುವಿಗೆ ಹಾಲು ಕುಡಿಸಿದ ಪುಣ್ಯಕೋಟಿ, ತಾನು ಹೀಗೆ ಹುಲಿಗೆ ಮಾತು ಕೊಟ್ಟು ಬಂದಿರುವುದರಿಂದ ಹೋಗುತ್ತಿದ್ದೇನೆ ಮತ್ತು ನನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಅದರ ಸ್ನೇಹಿತೆಯರಾದ ಗಂಗೆ, ಗೌರಿ ಮುಂತಾದವರ ಬಳಿ ಕೇಳಿಕೊಂಡು ವಾಪಸ್‌ ಹುಲಿಯ ಬಳಿ ಹೊರಟು ಹೋಗಿದೆ. ಆಮೇಲೆ ಏನಾಗಿದೆ ಗೊತ್ತಿಲ್ಲ, ಪುಣ್ಯಕೋಟಿ ಮಧ್ಯರಾತ್ರಿಯ ಹೊತ್ತಿಗೆ ದೊಡ್ಡಿಗೆ ಹಿಂದಿರುಗಿದೆ. ಹಾಗೆ ಬರುವಾಗ ಅದು ವಿಪರೀತ ಭಯಕ್ಕೆ ಮತ್ತು ಮಾನಸಿಕ ಅಸಮತೋಲನಕ್ಕೆ ಒಳಗಾಗಿದೆ, ಏನಾಯಿತು ಎಂದು ಸ್ನೇಹಿತೆಯರು ಮತ್ತೆ ಮತ್ತೆ ಒತ್ತಾಯಿಸಿ ಕೇಳಿದಾಗ ಅರ್ಭುತ ಹಾರಿ ನೆಗೆದು ಪ್ರಾಣ ಬಿಟ್ಟ ವಿಚಾರವನ್ನು ಹೇಳಿದೆ. ಯಾಕೆ ಎಂದು ಕೇಳಿದರೆ ಉತ್ತರವಿಲ್ಲ. ಮರುದಿನ ಬೆಳಿಗ್ಗೆ ವಿಚಾರ ಕಾಳಿಂಗನಿಗೆ ತಿಳಿದಿದೆ, ಅವನು ನಮ್ಮ ಗೋಪಿಯ ಸಂಭಂದಿ, ಇವನಿಗೆ ಫೋನು ಮಾಡಿ ವಿಚಾರ ತಿಳಿಸಿ ಮುಂದೆ ಏನು ಮಾಡಬಹುದು ಎಂದು ಕೇಳಿದಾಗ ಕೂಡಲೇ ಪೋಲಿಸರಿಗೆ ವಿಚಾರ ತಿಳಿಸಬೇಕೆಂದೂ ಮತ್ತು ಯಾವುದೇ ಮಾಧ್ಯಮಕ್ಕೂ ವಿಷಯ ತಿಳಿಯದಂತೆ ನೋಡಿಕೊಳ್ಳಬೇಕೆಂದೂ, ಒಂದು ವೇಳೆ ಗೊತ್ತಾದರೆ, ಪುಣ್ಯಕೋಟಿಯ ಜೀವನ ಬಹಳ ಕಷ್ಟವಾಗಿ ಹೋಗುತ್ತದೆಯೆಂದು ಹೇಳಿದ್ದನಾದರೂ ಅದರ ಉದ್ದೇಶ ನನಗೆ ಉಪಕಾರ ಮಾಡುವುದಾಗಿತ್ತು.
      ನಾನು ಮತ್ತು ನನ್ನ ಒಬ್ಬ ಸಹೋದ್ಯೋಗಿ ಮಿತ್ರ ಕಾಳಿಂಗನ ಮನೆ ತಲುಪುವ ಹೊತ್ತಿಗೆ ಸುಮಾರು ರಾತ್ರಿ ಎಂಟು ಗಂಟೆ. ಕಾಳಿಂಗನನ್ನು, ಪುಣ್ಯಕೋಟಿಯನ್ನು ಮಾತನಾಡಿಸಿ ವಿಚಾರ ತಿಳಿದುಕೊಂಡು ಬರುವ ಉದ್ದೇಶದಿಂದಷ್ಟೇ ನಾವಲ್ಲಿಗೆ ಹೋದದ್ದಾದರೂ ನಮ್ಮ ಆ ಪ್ರಯಾಣ ಎಂತಹ ದೊಡ್ಡ ಸಾಹಸವಾದೀತು ಎನ್ನುವ ಕಲ್ಪನೆಯೂ ನನಗೆ ಇರಲಿಲ್ಲ.
      ಗೋಪಿಯ ಹೆಸರು ಹೇಳಿದಮೇಲೆ ಕಾಳಿಂಗ ನಮ್ಮನ್ನು ಮನೆಯೊಳಗೆ ಕರೆದುಕೊಂಡು ಅವನಿಗೆ ಗೊತ್ತಿರುವಷ್ಟು ವಿಚಾರಗಳನ್ನು ಹೇಳಿದ, ಅದರಲ್ಲಿ ನಮಗೆ ತಿಳಿದಿರುವುದಕ್ಕಿಂತ ಹೆಚ್ಚೇನೂ ಇರಲಿಲ್ಲ. ನಾನು ಅರ್ಭುತ ಆತ್ಮಹತ್ಯೆ ಮಾಡಿಕೊಂಡ ಜಾಗಕ್ಕೆ ನಮ್ಮನ್ನು ಕರೆದೊಯ್ಯುವಂತೆ ಕೇಳಿದಾಗ ಅದು ಕಾಡಿನ ಒಳಭಾಗದಲ್ಲಿದೆಯೆಂದೂ, ಪೋಲಿಸರೇ ಅಲ್ಲಿಗೆ ನಾಳೆ ಹೋಗುತ್ತಾರೆಂದೂ, ನಾವೂ ನಾಳೆಯೇ ಹೋಗೋಣ ಎಂದು ಹೇಳಿದಾಗ ನಾವು ಒಪ್ಪಲೇ ಬೇಕಾಯಿತು. ಆ ದಿನ ರಾತ್ರಿ ಕಾಳಿಂಗನ ಮನೆಯಲ್ಲೇ ನಾವು ಊಟಮಾಡಿ ಮಲಗಿದೆವು.
************
        ನಾವು ಮರುದಿನ ಬೆಳಿಗ್ಗೆ ಸ್ಥಳಕ್ಕೆ ಹೋಗುವಷ್ಟರಲ್ಲೇ ಬಿಸಿಲು ಏರಿತ್ತು. ಕಾಳಿಂಗನ ಮನೆಯಿಂದ ಬೇಗನೆ ಹೊರಟೆವಾದರೂ ಕಾಡಿನ ಹಾದಿಯಲ್ಲಿ ಬೆಟ್ಟಗಳನ್ನು ಏರಿಳಿಯುತ್ತಾ ನಡೆಯುವಷ್ಟರಲ್ಲಿ ಹೊತ್ತು ಏರಿತ್ತು. ಅಷ್ಟರಲ್ಲಾಗಲೇ ಕೆಲವು ಪೋಲಿಸರು, ಗ್ರಾಮಸ್ಥರು ಅಲ್ಲಿದ್ದರು. ಅರ್ಭುತನ ಕಡೆಯಿಂದ ಅಕ್ರೂರ ಎನ್ನುವ ಆತನ ಒಬ್ಬ ಸ್ನೇಹಿತನನ್ನು ಹೊರತುಪಡಿಸಿ ಮತ್ಯಾರೂ ಇರಲಿಲ್ಲ. ಅಲ್ಲಿದ್ದ ಒಬ್ಬ ಪೋಲಿಸ್‌ ಅಧಿಕಾರಿಯ ಬಳಿ ಮಾತಾಡಿದಾಗ ಅರ್ಭುತನ ಕುಟುಂಬಸ್ಥರಿಗೆ ಇನ್ನೂ ವಿಚಾರ ತಿಳಿಸಿಲ್ಲ ಎಂದು ಹೇಳಿದ. ಅಕ್ರೂರ ವಿಷಯವನ್ನು ತಿಳಿಸುವುದಕ್ಕೆ ಅರ್ಭುತನ ಮನೆಗೆ ಹೊರಟಿದ್ದಾನೆ ಎಂದು ತಿಳಿಯಿತು. ಅವನ ಜೊತೆ ಹೋದರೆ ಅವನ ಮನೆಯವರನ್ನು ಮಾತಾಡಿಸಿ, ದಾರಿಯಲ್ಲಿ ಅವನ ಜೊತೆಯಲ್ಲಿ ಮಾತಾಡಿ ಅರ್ಭುತನ ಕುರಿತಾಗಿ ಇನ್ನೂ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಒಂದು ಆಸಕ್ತಿಕರವಾದ ಲೇಖನ ಬರೆಯಬಹುದು ಎಂದು ಬಲವಾಗಿ ಅನಿಸಿತು. ನನ್ನ ಸಹೋದ್ಯೋಗಿಯ ಬಳಿ ಅಲ್ಲಿನ ಆಗುಹೋಗುಗಳನ್ನು ಸರಿಯಾಗಿ ಗಮನಿಸಿಕೋಳ್ಳುವಂತೆ ಹೇಳಿ ನಾನು ಅಕ್ರೂರನೊಡನೆ ಅರ್ಭುತನ ಮನೆಯತ್ತ ಹೊರಟೆ.
       ಅಕ್ರೂರನಿಗೆ ಅರ್ಭುತನ ಸಾವಿನಿಂದ ವಿಪರೀತ ಆಘಾತವಾದದ್ದು ಸ್ಪಷ್ಟವಿತ್ತು. ಅವನ ಮಾತಿನಲ್ಲೇ ಅದು ತಿಳಿಯುತ್ತಿತ್ತು. ಸ್ವಭಾವತಃ ಸ್ವಲ್ಪ ಹೆಚ್ಚೇ ಮಾತುಗಾರನಾಗಿದ್ದ ಅಕ್ರೂರ ನನ್ನೊಂದಿಗೆ ಒಂದೇ ಸಮನೆ ಮಾತಾಡತೊಡಗಿದ. ಆತ ಮತ್ತು ಅರ್ಭುತ ಬಾಲ್ಯ ಸ್ನೇಹಿತರಾಗಿದ್ದರು. ಒಟ್ಟಿಗೆ ಬೇಟೆಯಾಡಲು ಕಲಿತವರು.
       ಅರ್ಭುತನ ಮದುವೆಯ ಹಿಂದೆ ಒಂದು ಕತೆಯಿತ್ತು. ಅರ್ಭುತ ಅವನ ಹೆಂಡತಿ ಕಾಳಿಯನ್ನು ಮೊದಲು ಭೇಟಿಯಾದದ್ದೇ ಆಕೆಯ ನಿಶ್ಚಿತಾರ್ಥದಲ್ಲಾಗಿತ್ತು, ಎಂದರೆ ಕಾಳಿ ಬೇರೆಯೊಬ್ಬನಿಗೆ ನಿಶ್ಚಯವಾದ ಹೆಣ್ಣು, ಆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೇ ಅವರಿಬ್ಬರು ಪರಸ್ಪರ ನೋಡಿಕೊಂಡಿದ್ದರು, ಕಾಳಿಗೂ ಅರ್ಭುತ ಇಷ್ಟವಾಗಿದ್ದ. ಹಾಗಾಗಿ ನಿಶ್ಚಯವಾದ ಮದುವೆ ಮುರಿದು ಬಿದ್ದಿತ್ತು. ಮನೆಯವರ, ಊರಿನವರ ವಿರುದ್ಧವಾಗಿ ಅವರಿಬ್ಬರೂ ಮದುವೆಯಾಗಿದ್ದರು. ಇದಾದಮೇಲೆ ಊರಿನವರ ಮತ್ತು ಅರ್ಭುತನ ಕುಟುಂಬಕ್ಕೂ ಸಂಪರ್ಕ ಬಹಳ ಕಡಿಮೆಯಾಗಿತ್ತು. ಅರ್ಭುತ ಹೀಗೆ ಬೇರೆಯವನಿಗೆ ನಿಶ್ಚಯವಾಗಿದ್ದ ಹೆಣ್ಣನ್ನು ಮದುವೆಯಾದದ್ದು ಅಕ್ರೂರನಿಗೂ ಸರಿ ಎನಿಸಿರಲಿಲ್ಲ ಹಾಗಾಗಿ ಅವನೂ ಅರ್ಭುತನೊಂದಿಗಿನ ಸ್ನೇಹವನ್ನು ಸ್ವಲ್ಪ ಕಡಿಮೆ ಮಾಡಿದ್ದ.
      ನನಗೆ ಇಂತಹ ಅರ್ಭುತನ ಬದುಕು ಹೇಗೆ ಸಾಗುತ್ತಿದ್ದಿರಬೇಕೆಂದು ಅಶ್ಚರ್ಯವಾಯಿತು. ಅದನ್ನೇ ಅಕ್ರೂರನ ಬಳಿ ಕೇಳಿದಾಗ ಅವನು ವಿಷಾದದ ನಗೆ ನಕ್ಕ. ಅವನು ಮುಂದೆ ಹೇಳಿದ ವಿಷಯ ಕೇಳಿ ನನಗೆ ಸತ್ತ ಅರ್ಭುತನ ಬಗ್ಗೆ ಕರುಣೆ ಮೂಡಿತು. ಹಾಗೆ ಮದುವೆಯಾದ ನಂತರ ಅರ್ಭುತ ಮತ್ತವನ ಹೆಂಡತಿ ತಮ್ಮ ತಮ್ಮ ಕುಟುಂಬಗಳಿಂದ ಸಂಪೂರ್ಣ ಹೊರಬಿದ್ದರಂತೆ, ಅದರಿಂದ ಕಾಳಿಗೆ ಅಂತಹ ದುಃಖವೇನೂ ಅಗದಿದ್ದರೂ, ತುಂಬು ಕುಟುಂಬದ ಪ್ರೀತಿಯಲ್ಲಿ ಬೆಳೆದ ಅರ್ಭುತನಿಗೆ ಇದರಿಂದ ಬಹಳ ವೇದನೆಯುಂಟಾಯಿತಂತೆ. ಇದರ ಜೊತೆಗೆ ಕಾಳಿ ಮಹತ್ವಾಕಾಂಕ್ಷೆಯ ಹೆಣ್ಣಾಗಿದ್ದಳು. ಅವಳಿಗೆ ಪ್ರತಿದಿನ ಎಳೆ ಜಿಂಕೆಯದ್ದೋ ಇಲ್ಲಾ ಬಲಿತ ಹಸುವಿನದ್ದೋ ಊಟವಾಗಬೇಕಿತ್ತು. ಆದರೆ ಪ್ರತೀದಿನ ಅವನ್ನು ಒದಗಿಸಲು ಅರ್ಭುತನಿಗೆ ಆಗದೇ ಹೋಯಿತು, ಇದರ ಜೊತೆಗೆ ಶಾಪವೋ ಎಂಬಂತೆ ಅವರಿಗೆ ವರ್ಷಗಳು ಕಳೆದರೂ ಮಕ್ಕಳು ಹುಟ್ಟಲಿಲ್ಲ. ಇದರಿಂದಲೂ ಅರ್ಭುತ ಬಹಳ ನೊಂದುಹೋಗಿದ್ದ. ಕಾಳಿಯೂ ಅವನನ್ನು ಅಲಕ್ಷಿಸತೊಡಗಿದ್ದಳು. ಪ್ರತಿದಿನ ಮನೆಯಲ್ಲಿ ಒಂದಲ್ಲಾ ಒಂದು ಜಗಳ. ಇದರಿಂದ ಬೇಸತ್ತ ಅರ್ಭುತ ಮನೆಗೆ ಬರುವುದನ್ನೇ ನಿಲ್ಲಿಸಿ ಬೇರೆ ಗುಹೆಯಲ್ಲೇ ವಾಸಿಸತೊಡಗಿದ್ದ. ಆ ಗುಹೆಯ ಬಳಿಯಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡದ್ದು.
                                                                    ******************

    ಹೀಗೆ ಮಾತಾಡುತ್ತ ಅಕ್ರೂರ ಚಿಂತಿಸಬಹುದಾದ ವಿಷಯವೊಂದನ್ನು ಹೇಳಿದ. ಇದರ ಕುರಿತಾಗಿ ಓದುಗರೇ ಚಿಂತಿಸಿ ಒಂದು ಸೂಕ್ತ ಪರಿಹಾರ ಕೊಡಬಲ್ಲರೆಂದು ನನಗೆ ಅನಿಸಿತು. ಎಷ್ಟೇ ಬೇಸರದಲ್ಲಿದ್ದರೂ, ಅರ್ಭುತ ಮಾನಸಿಕವಾಗಿ ಬಹಳ ಸಧೃಢನಾಗಿದ್ದ. ಆತ ಆತ್ಮಹತ್ಯೆ ಮಾಡಿಕೊಳ್ಳುವಂತಃ ಹೇಡಿ ಆಗಿರಲಿಲ್ಲ. ಅವನ ಜೊತೆಯಲ್ಲೇ ಬೆಳೆದು ದೊಡ್ಡವನಾದ ಅಕ್ರೂರನಿಗಂತು ಇದು ಆತ್ಮಹತ್ಯೆ ಎನ್ನುವುದರಲ್ಲಿ ಸ್ವಲ್ಪವೂ ವಿಶ್ವಾಸವಿರಲಿಲ್ಲ. ಅದನ್ನು ಹೇಳುತ್ತಲೇ ಈ ಚಿಂತನೀಯ ವಿಷಯವನ್ನವನು ನನ್ನ ಬಳಿ ಹೇಳಿದ್ದು. ಅವನಿಗೆ ಇದೊಂದು ಕೊಲೆ ಎಂದು ಬಲವಾದ ಸಂಶಯ. ಯಾವ ಜೀವಿಯಾದರೂ ತನ್ನ ಜೀವವನ್ನು ಅಪ್ರತಿಭವಾಗಿ ಪರರಿಗೆ ಒಪ್ಪಿಸಲು ಮುಂದಾಗುವುದಿಲ್ಲ, ತನ್ನದೆನ್ನುವ ಒಂದು ಚೆಂದದ ಸಂಸಾರವನ್ನು ಹೊಂದಿರುವ ಪುಣ್ಯಕೋಟಿ ಅದಕ್ಕೆ ಒಪ್ಪಿರುವುದಕ್ಕೆ ಹೇಗೆ ಸಾಧ್ಯ, ಅಂದರೆ ಅಕ್ರೂರನ ಪ್ರಕಾರ, ಅತಿಯಾದ ಆದರ್ಶಕ್ಕೆ ಒಳಗಾದ ಪುಣ್ಯಕೋಟಿ ಅರ್ಭುತನಿಗೆ ಆಹಾರವಾಗಲೆಂದು ಅವನ ಗುಹೆಯಬಳಿ ಬಂದಿದೆ, ಅರ್ಭುತನೂ ಹಲವು ದಿನಗಳ ನಂತರ ಹಸುವಿನ ಮಾಂಸವನ್ನು ತೆಗೆದುಕೊಂಡು ಕಾಳಿಯ ಬಳಿಯಲ್ಲಿ ಹೋಗುವ ಕನಸು ಕಂಡಿದ್ದನಿರಬೇಕು ಆದರೆ ಅರ್ಭುತನ ಗುಹೆಯ ಬಳಿಗೆ ತಲುಪುವಷ್ಟರಲ್ಲಿ ಪುಣ್ಯಕೋಟಿಯ ಆದರ್ಶ ಸವೆದುಹೋಗಿ ಬದುಕುವ ಆಸೆ ಬಲಿತು ನಿಂತಿದೆ. ಆ ಸಮಯಕ್ಕೇ ಅರ್ಭುತನೂ ಪುಣ್ಯಕೋಟಿಯನ್ನು ಕೊಲ್ಲಲು ಮುಂದಾಗಿದ್ದಾನೆ. ಪುಣ್ಯಕೋಟಿಯೂ ಅವನನ್ನು ತಡೆಯುವ ಪ್ರಯತ್ನ ಮಾಡಿದೆ. ಈ ಜಟಾಪಟಿಯಲ್ಲಿ ಅರ್ಭುತನನ್ನು ಹೆಚ್ಚು ಕಡಿಮೆ ಅವನಷ್ಟೇ ಬಲಿಷ್ಟಳಾದ ಪುಣ್ಯಕೋಟಿ ಪ್ರಪಾತಕ್ಕೆ ತಳ್ಳಿದ್ದಾಳೆ.
   ಅಕ್ರೂರ ಹೀಗೆ ಹೇಳುವಾಗ ನಾನು ಪುಣ್ಯಕೋಟಿಯ ದೇಹವನ್ನು ನೆನೆದೆ. ಆದರೆ ನಾನಿನ್ನೂ ಅರ್ಭುತನನ್ನು ನೋಡಿರಲಿಲ್ಲ, ಆದರೆ ಅರ್ಭುತನೂ ಅಕ್ರೂರನಷ್ಟೇ ಬಲಿಷ್ಟನಾಗಿದ್ದ ಪಕ್ಷದಲ್ಲಿ ಅಕ್ರೂರ ಹೇಳಿದಂತೆ ನಡೆದಿರುವುದೂ ಸಾಧ್ಯವಿದೆ ಎನಿಸಿತು. ಪುಣ್ಯಕೋಟಿ ಮಾನಸಿಕವಾಗಿ ಅಷ್ಟು ಕುಗ್ಗಿ ಹೋದದ್ದಕ್ಕೂ, ತಾನು ಕೊಲೆಗಾರ್ತಿಯಾಗಿಹೋದೆನೆನ್ನುವ ಪಾಪಪ್ರಜ್ಞೆಯೇ ಕಾರಣವಾಗಿರಬಹುದೆಂದು ಊಹಿಸಿದೆ.
                                                                   ********************

  ಸುಮಾರು ಎರಡು ತಾಸಿನ ಪ್ರಯಾಣದ ನಂತರ ನಾವು ಅರ್ಭುತನ ಮನೆ ತಲುಪಿದೆವು. ಮನೆಯಲ್ಲಿ ಕಾಳಿ ಒಬ್ಬಳೇ ಇದ್ದಳು. ಬಂದ ನನ್ನನ್ನು ಮತ್ತು ಅಕ್ರೂರನನ್ನು ಒಮ್ಮೆಗೆ ಕಂಡು ಸ್ವಲ್ಪ ಹೆಚ್ಚೇ ಮುಜುಗರಪಟ್ಟಳು. ಅಕ್ರೂರ ಯಾವುದೇ ಹಿಂಜರಿಕೆಯಿಲ್ಲದೆ ಅರ್ಭುತನ ಸಾವಿನ ಸುದ್ದಿ ಹೇಳಿದ, ಒಂದು ಕ್ಷಣ ದುಃಖದಲ್ಲಿ ಎಂಬಂತೆ ತಲೆ ಬಗ್ಗಿಸಿದಳು. ನಾಲ್ಕು ಹನಿ ಕಣ್ಣೀರೇನು ಅವಳ ಕಣ್ಣಿನಿಂದ ಉದುರಿದಂತೆ ನನಗೆ ಕಾಣಲಿಲ್ಲ. ಮರುಕ್ಷಣವೇ ಸಾವರಿಸಿಕೊಂಡು ನಮ್ಮ ಜೊತೆ ಹೊರಟು ನಿಂತಳು. ಸ್ತ್ರೀ ಸಹಜವಾದ ಅಲ್ಲ ಪತ್ನಿ ಸಹಜವಾದ ಯಾವ ಪ್ರಶ್ನೆಗಳನ್ನೂ ಆಕೆ ಕೇಳಲಿಲ್ಲ. ಅಕ್ರೂರನಲ್ಲಿ ಹೆಚ್ಚು ಮಾತನಾಡುವುದು ಆಕೆಗೆ ಇಷ್ಟವಿಲ್ಲ ಎಂಬುದು ಸ್ಪಷ್ಟವಿತ್ತು. ನಾವಿಬ್ಬರೂ ಕಾಳಿಯನ್ನು ಕರೆದುಕೊಂಡು, ಒಂದೂ ಮಾತಿಲ್ಲದೇ ಮತ್ತೆ ಎರಡು ತಾಸು ನಡೆದು ಅರ್ಭುತ ಸತ್ತ ಜಾಗಕ್ಕೆ ಹಿಂದಿರುಗಿದೆವು.
                                                                   **********************

  ನಾವು ಬರುವಷ್ಟರಲ್ಲಿ ಹೊತ್ತು ಇಳಿಯಹತ್ತಿತ್ತು. ಪೋಲಿಸರು ಅರ್ಭುತನ ಹೆಣವನ್ನು ಪ್ರಪಾತದಿದಂದ ಎತ್ತಿ ಬಯಲಿನಲ್ಲಿ ಮಲಗಿಸಿದ್ದರು. ನನ್ನ ಸಹೋದ್ಯೋಗಿ ಅವನ ಫೋಟೋಗಳನ್ನು ಅದಾಗಲೇ ತೆಗೆದುಕೊಂಡು ಹೊರಡಲು ಕಾದು ನಿಂತಿದ್ದ. ನಾನೂ ಹೋಗಿ ಅರ್ಭುತನ ಹೆಣ ನೋಡಿದೆ. ಅವನ ಮೈಮೇಲೆಲ್ಲಾ ಗಾಯವಾಗಿ ರಕ್ತ ಹರಿದು ಹೆಪ್ಪುಗಟ್ಟಿತ್ತು. ತಲೆ ವೇಗವಾಗಿ ಹೋಗಿ ಕಲ್ಲುಬಂಡೆಗೆ ಹೊಡೆದ ಪರಿಣಾಮ ಜೀವ ಹೋಗಿತ್ತು, ಸತ್ತ ಅರ್ಭುತನ ಕಣ್ಣಲ್ಲಿ ಅಪಾರವಾದ ವೇದನೆ ಮತ್ತು ಅಶ್ಚರ್ಯಗಳಿದ್ದವು.
  ಹೆಣವನ್ನು ನೋಡಿದ ಕಾಳಿ ಅಷ್ಟೇನು ದುಃಖಿಸಲಿಲ್ಲ. ಅಕ್ರೂರ ಹೆಣವನ್ನು ಕಂಡು ಕಣ್ಣೀರು ಹಾಕಿಯಾನು ಎನ್ನುವ ನನ್ನ ನಿರೀಕ್ಷೆ ಸುಳ್ಳಾದದ್ದು ಕಂಡು ನನಗೇ ಅಚ್ಚರಿಯಾಯಿತು. ಪೋಲಿಸರು ಪೋಸ್ಟ್‌ ಮಾರ್ಟಮ್ಮಿಗೆ ಹೆಣ ತೆಗೆದುಕೊಂಡು ಹೋಗುತ್ತೇವೆಂದಾಗಲೂ ಕಾಳಿ ಮಾತಾಡಲಿಲ್ಲ. ಪೋಲಿಸರು ಹೆಣವನ್ನು ತೆಗೆದುಕೊಂಡು, ಕಾಳಿಯನ್ನೂ ಕರೆದುಕೊಂಡು ಠಾಣೆಗೆ ಹೋದರು. ಊರಿನವರೆಲ್ಲಾ ಅಷ್ಟೊತ್ತಿಗಾಗಲೇ ಹೋಗಿಯಾಗಿತ್ತು. ಕವಿಯುತ್ತಿದ್ದ ಕತ್ತಲೆಯಲ್ಲಿ ನಾನು, ನನ್ನ ಸಹೋದ್ಯೋಗಿ ಮತ್ತು ಅಕ್ರೂರ ಮಾತ್ರ ನಿಂತಿದ್ದೆವು.
    ನಾನು ಅಕ್ರೂರನಿಗೆ ಧನ್ಯವಾದ ಹೇಳಿ, ಸಹೋದ್ಯೋಗಿಯೊಂದಿಗೆ ಮನೆಯತ್ತ ಹೊರಟೆ. ಕತ್ತಲಲ್ಲಿ ಅಕ್ರೂರನ ಮುಖದಲ್ಲಿ ಯಾವ ಭಾವನೆಯಿತ್ತೋ ತಿಳಿಯುವಂತಿರಲಿಲ್ಲ. ಬೆನ್ನು ಮಾಡಿ ಹೊರಟಿದ್ದ ನನ್ನನ್ನು ಅಕ್ರೂರ ಕರೆದು ನಿಲ್ಲಿಸಿದ. ಸಹೋದ್ಯೋಗಿಯ ಬಳಿ ಕಾಳಿಂಗನ ಮನೆಗೆ ಹೋಗಿ ಹೊರಡುವ ತಯಾರಿ ಮಾಡಿಕೊಳ್ಳುವಂತೆ ಹೇಳಿ ನಾನು ತಿರುಗಿ ಅಕ್ರೂರನ ಬಳಿ ಬಂದೆ. 
   ಅರ್ಭುತನನ್ನು ಪುಣ್ಯಕೋಟಿಯೇ ಕೊಂದಿರಬಹುದೆಂಬ ಅವನ ಶಂಕೆಯನ್ನು ಪೋಲಿಸರೂ ಗಂಭೀರವಾಗಿ ಪರಿಗಣಿಸುವಂತೆ ನಾನು ನನ್ನ ಪ್ರಭಾವವನ್ನು ಬಳಸಿ ಮಾಡಬೇಕೆಂದು ಕೇಳಿಕೊಂಡ. ನನ್ನ ಬಳಿ ಅಂತಹ ವಿಶೇಷ ಪ್ರಭಾವವೇನೂ ಇರದಿದ್ದರೂ ನಾನು ಆಗಲಿ ಎಂದೆ. ಬಹಳ ಹೊತ್ತಿನಿಂದ ಕೊರೆಯುತ್ತಿದ್ದ ಸಂಶಯವನ್ನು ಅಕ್ರೂರನಲ್ಲಿ ಕೇಳದೇ ಇರುವುದು ನನಗೆ ಸಾಧ್ಯವಾಗಲಿಲ್ಲ. ಆರ್ಭುತನ ಹೆಣ ನೋಡಿ ಒಂದು ಹನಿ ಕಣ್ಣೀರನ್ನು ಹಾಕಲಿಲ್ಲವಲ್ಲ ಯಾಕೆ? ನಿಮ್ಮ ನಡುವೆ ಇದ್ದದ್ದು ಯಾವ ಬಗೆಯ ಸ್ನೇಹ ಎಂದು ಕೇಳಿದೆ.
   ಕಾಳಿ, ಸತ್ತ ಅರ್ಭುತನ ಹೆಂಡತಿಯೇ ಕಣ್ಣೀರು ಹಾಕಲಿಲ್ಲ, ಇನ್ನು ನಾನು ಯಾಕೆ ಹಾಕಿಯೇನು? ಎಂದು ಕೇಳಿದನಾದರೂ ಅವನಿಗೆ ಇನ್ನು ಸುಮ್ಮನಿರುವುದು ಸಾಧ್ಯವಿಲ್ಲ ಎನಿಸಿರಬೇಕು. ಮುಂದುವರಿದು ಮಾತಾಡಿದ, 
 "ಅದನ್ನು ಹೇಳದೇ ಹೋಗುವುದು ನನಗೆ ಸಾಧ್ಯವಿಲ್ಲ ಎನಿಸುತ್ತದೆ, ನಿಜ ಹೇಳಬೇಕೆಂದರೆ ಇದನ್ನು ಹೇಳಲೆಂದೇ ಹೊರಟಿದ್ದ ನಿಮ್ಮನ್ನು ಮತ್ತೆ ಕರೆದೆ" ಇಷ್ಟು ಹೇಳಿ ಅವನೊಂದುಕ್ಷಣ ಸುಮ್ಮನಾದ. ಏನೋ ಬಹಳ ಗಂಭೀರವಾದ ವಿಷಯವನ್ನು ಹೇಳಲೆಂದು ಅವನು ಸಿದ್ಧನಾಗುತ್ತಿರುವುದು ಸ್ಪಷ್ಟವಿತ್ತು, ಸಿದ್ಧನಾಗಿ ಮೌನವನ್ನು ಮುರಿದು ಆಡಿದ, 
                                           "ಅರ್ಭುತ ಕಾಳಿಯನ್ನು ಮೊದಲಸಾರಿ ನೋಡಿದ್ದು ನನ್ನದೇ ನಿಶ್ಚಿತಾರ್ಥದಲ್ಲಾಗಿತ್ತು."

Sunday, January 7, 2024

ಉತ್ತರಕಾಂಡ - ಕೆಲವು ಟಿಪ್ಪಣಿಗಳು


ನಾಲ್ಕುವರೆ ವರ್ಷಗಳ ನಂತರದ ಮರು ಓದಿನ ಹೊತ್ತಿನಲ್ಲಿ ಉತ್ತರಕಾಂಡದ ಕುರಿತಾದ ಕೆಲವು ಟಿಪ್ಪಣಿಗಳಿವು.  ರಾಮನು ಮಹಾವಿಷ್ಣುವಿನ ಅವತಾರ ಸೀತೆ ಮಹಾಲಕ್ಷ್ಮಿಯ ಅವತಾರ ಎನ್ನುವ ಭಕ್ತಿಭಾವವನ್ನು ಕೆಲಹೊತ್ತು ಕಳಚಿಡದ ಹೊರತು ಈ ಟಿಪ್ಪಣಿಗಳಿಗೆ ಅರ್ಥ ಬರುವುದಿಲ್ಲ.


1. ಕೃತಜ್ಞತೆ ಯಲ್ಲಿ ಭೈರಪ್ಪ ಹೇಳುವಂತೆ ಉತ್ತರಕಾಂಡ ವಾಲ್ಮೀಕಿ ರಾಮಾಯಣವನ್ನಾಧರಿಸಿದ ಲೇಖಕನ ನೇರ ಸೃಜನಶೀಲ ಪ್ರತಿಕ್ರಿಯೆಯೇ ಹೊರತು ವಾಲ್ಮೀಕಿ ರಾಮಾಯಣದ re-telling ಅಲ್ಲ ಮತ್ತು ಈ ವ್ಯತ್ಯಾಸ ಸೂಕ್ಮ್ಮವಾದದ್ದು‌. ಈ ಪ್ರತಿಕ್ರಿಯೆ ಎನ್ನುವ ಶಬ್ಧ ನೇರ 'ಪರ್ವ' ಕಾದಂಬರಿಯನ್ನುದ್ದೇಶಿಸಿದ್ದು. ವಾಲ್ಮೀಕಿ ರಾಮಾಯಣಕ್ಕೆ parallel ಆದ ಕೃತಿಯೊಂದನ್ನೂ ನಿರ್ಮಿಸ ಬಹುದಾದ ಸೃಜನಶೀಲ ಸ್ವಾತಂತ್ರ್ಯಕ್ಕೆ ಭೈರಪ್ಪ ಕೃತಜ್ಞತೆ ಯಲ್ಲೇ ಅಡಿಗಲ್ಲು ಹಾಕಿಕೊಂಡಿದ್ದಾರೆ.


2. ಸುಕೇಶಿ ರಾಮನ ಕುರಿತು ಸೀತೆಯಲ್ಲಿ ಸದಾ ಒಳ್ಳೆಯ ಮಾತುಗಳನ್ನೇ ಆಡುತ್ತಾಳೆ. 'ಭಾವಯ್ಯ ಚಿನ್ನದಂಥ ಮನುಷ್ಯ, ಒಂದೆರಡು ವರ್ಷ ಸುಮ್ಮನಿರು. ಅವರೇ ಇಲ್ಲಿಗೆ ಬಂದು ನಿನ್ನನ್ನು ಕರಕೊಂಡು ಹೋಗ್ತಾರೆ ನೋಡು' ಎನ್ನುತ್ತಾಳೆ. 'ಅವರ ಸ್ವಭಾವ ನಿನಗೆ ಗೊತ್ತಿಲ್ಲ' ಎನ್ನುವ ಸೀತೆಯ ಪ್ರತ್ಯುತ್ತರದ ಹಿಂದಿರುವ, ಆತ ಚಿನ್ನದಂಥ ಮನುಷ್ಯ ಆಗಿರುವುದಕ್ಕೇ ತನಗೆ ಈ ಸ್ಥಿತಿ ಬಂದಿರುವುದು ಮತ್ತು ಅದೇ ಕಾರಣಕ್ಕಾಗಿಯೇ ಆತ ತನ್ನನ್ನು ಬಂದು ಕರಕೊಂಡು ಹೋಗುವುದಿಲ್ಲ ಎನ್ನುವ ಪ್ರಾಮಾಣಿಕ ಭಾವ ಸುಕೇಶಿಗೆ ತಿಳಿಯುವುದಿಲ್ಲ.


3. ರಾಮನು ಸೀತೆಯನ್ನು ತ್ಯಜಿಸುವ ಹೊತ್ತಿಗೆ ಉದ್ಭವಿಸುವ ಪರಿಸ್ಥಿತಿ ಬಹಳ ಗೋಜಲಿನದ್ದು. ಮನುಷ್ಯ ಸಹಜವಾಗಿ ನೋಡಿದರೆ ಅಲ್ಲಿ ಯಾರಲ್ಲೂ ತಪ್ಪನ್ನು ಹುಡುಕುವಂತಿಲ್ಲ. ರಾಮಾಯಣದ ಬರವಣಿಗೆಗೆ ಸ್ಪೂರ್ತಿಯಾದ ನಿಷಾದನು ಹಕ್ಕಿಯನ್ನು ಕೊಂದು ಗಂಡು ಮತ್ತು ಹೆಣ್ಣು ಹಕ್ಕಿಗಳನ್ನು ಬೇರ್ಪಡಿಸುವಂತೆ. ಇಲ್ಲಿ ವಿಧಿಯೇ ನಿಷಾದ ರೂಪದಲ್ಲಿ ಬಂದಿದೆ, ಹಾಗಾದರೆ ಇದು ನಿಷಾದನ ತಪ್ಪೇ ಎಂದರೆ ಅಲ್ಲ. ಹಾಗೂ ಬೇರ್ಪಡಿಸುವುದೇ ಅವನ ಕರ್ಮ. 

ರಾವಣನಂತಹ ರಾಕ್ಷಸನ ಅಧೀನದಲ್ಲಿದ್ದ ಸ್ತ್ರೀಯೊಬ್ಬಳು ದೈಹಿಕವಾಗಿ "ಪಾವಿತ್ರ್ಯ" ವನ್ನು ಉಳಿಸಿಕೊಂಡಿರಲು ಸಾಧ್ಯವೇ ಎಂಬ ಭಾವ ಜನಸಾಮಾನ್ಯರಲ್ಲಿ ಮೂಡುವುದು ಅಸಹಜವಲ್ಲ ಆದರೆ ಇದಕ್ಕೆ ರಾಮನ ಉತ್ತರ ಏನಿರಬೇಕಿತ್ತು? ಸೀತೆಯನ್ನು ಪರಿತ್ಯಜಿಸಿದರೆ ಏನರ್ಥ? ಜನರ ಮಾತನ್ನು ಪುರಸ್ಕರಿಸುವುದು ಬೇರೆ ಒಪ್ಪುವುದು ಬೇರೆ. ಇದನ್ನು ರಾಮ ಏಕೆ ಮರೆತ? ಸೀತೆಯನ್ನು ಮನಸಾ ಒಪ್ಪಿ ಗೌರವಿಸುತ್ತಿದ್ದ ಇನ್ನುಳಿದ ಪ್ರಜೆಗಳ ಭಾವನೆಗೆ ಬೆಲೆ ಇಲ್ಲವೆ?


4. "ನಿನಗೆ ರಾಮನ ಮೇಲೆ ಇದ್ದಷ್ಟು ಪ್ರೀತಿ ನನಗೆ ಲಕ್ಷ್ಮಣನ ಮೇಲೆ ಇರಲಿಲ್ಲವೇನೋ" ಎನ್ನುತ್ತಾಳೆ ಊರ್ಮಿಳೆ. ಆದರೆ, ಅವರಿಬ್ಬರ ಗಂಡಂದಿರ ಮೂಲ ಗುಣಗಳಲ್ಲೇ ಹೋಲಿಕೆ ಮಾಡಲಾರದಂತಹ ವ್ಯತ್ಯಾಸಗಳಿವೆ. ಇದೇ ವಾಕ್ಯವನ್ನೇ ಆಧಾರವಾಗಿಟ್ಟುಕೊಂಡಾಗ ಇನ್ನೊಂದು ಪ್ರಶ್ನೆ ಹುಟ್ಪುತ್ತದೆ. ಲಕ್ಷ್ಮಣನಿಗೆ ಊರ್ಮಿಳೆಯಲ್ಲಿರುವಷ್ಟು ಪ್ರೀತಿ ರಾಮನಿಗೆ ಸೀತೆಯಮೇಲಿರಲಿಲ್ಲವೇನೋ!


5. ಲಕ್ಷ್ಮಣನಿಗೆ ರಾಮನ ನಿರ್ಧಾರದ ಮೇಲೆ ಕೋಪವಿದೆ. ಆದರೆ, ಅದನ್ನು ವಿರೋಧಿಸುವ ಮತ್ತು ಆ ವಿರೋಧವನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇಲ್ಲ. ರಾಮನ ಕುರಿತಾಗಿ ಅವನಲ್ಲಿರುವ ವಿಪರೀತ ಭಕ್ತಿ, ಗೌರವಗಳೂ ಅದಕ್ಕೊಂದು ಕಾರಣ ಇರಬಹುದು. ಲಕ್ಷ್ಮಣ ಅಯೋಧ್ಯೆಯನ್ನು ತೊರೆದದ್ದು ರಾಮನ ಮೇಲಿನ ಬೇಸರಕ್ಕಿಂತಲೂ, ರಾಮನನ್ನು, ಅವನ ನಿರ್ಧಾರವನ್ನು ಎದುರಿಸಲಾದ ತನ್ನ ಅಸಹಾಯಕತೆಯ ಮೇಲಿನ ಸಿಟ್ಟಿನಿಂದ ಮತ್ತು ಅಂತಹ ಅಸಹಾಯಕತೆಯನ್ನು ಸೃಷ್ಟಿಸುತ್ತಿರುವ ಬಂಧನಗಳ ಮೇಲಿನ ಸಿಟ್ಟಿನಿಂದ.


6. "ಪೆದ್ದಿ ನಿನಗೆ ಯಾವಾಗ ಅರ್ಥ ಆಗುತ್ತೆ? ಭಾರ ಹೊತ್ತು, ನೋವು ಉಂಡು, ಎದೆಯ ಶಕ್ತಿಯನ್ನು ಉಣ್ಣಿಸಿ ಸಾಕೋದೇ ಹೆಣ್ಣಿನ ಕರ್ತವ್ಯ, ಅಧಿಕಾರ ಅಪ್ಪನದು ಅಂತ ಶಾಸ್ತ್ರ ಹೇಳುತ್ತೆ, ಅವುಗಳ ಅಪ್ಪ ಬಿಟ್ಟಾನೆಯೇ?" - ಊರ್ಮಿಳೆ.


7. ಗೌತಮರು ಅಹಲ್ಯೆಯನ್ನು ತಾವು ಯಾರ ಎದುರಿನಲ್ಲಿ ತಜಿಸಿದ್ದರೋ ಅವರೆದುರಲ್ಲಿಯೇ ಸ್ವೀಕರಿಸಬೇಕೆಂದು ರಾಮ ಹೇಳುತ್ತಾನೆ. ಅಹಲ್ಯೆಯ ಪಾವಿತ್ರ್ಯವನ್ನು ಅಂಗೀಕರಿಸುವ ಸ್ಥಾನದಲ್ಲಿ ನಿಂತು ಗೌತಮರ ಲೋಕಕ್ಕೆ ಆಕೆಯನ್ನು ಸ್ವೀಕರಿಸುವುದಾಗಿ ಹೇಳಿದರೆ ಅವಳ ತಪ್ಪಿನ ಹೊರತಾಗಿಯೂ ಶುದ್ಧಿ ದೊರಕುತ್ತದೆ. ಎಂದರೆ, ಪಾತಿವ್ರತ್ಯದಂತಹ ವಿಚಾರದ ಕುರಿತು ಪ್ರಪಂಚ ಏನೇ ಮಾತಾಡಿದರೂ ಅದು ದಂಪತಿಗಳ ನಡುವಣ ವಿಚಾರ. ಪತಿಯಾದವನೇ ಪತ್ನಿಯನ್ನು ಒಪ್ಪಿದ ಮೇಲೆ ಪ್ರಪಂಚವೂ ಒಪ್ಪಬೇಕು.


ಇವು ಓದುತ್ತಾ ಅದರೊಟ್ಟಿಗೆ ನಾನು ಮಾಡಿಕೊಂಡ ಟಿಪ್ಪಣಿಗಳು. ಇದರ ನಂತರ ಓದುತ್ತಾ ಒಟ್ಟಿಗೇ ಹೀಗೆ ಬರೆಯುವುದು ಓದಿನ ಪೂರ್ಣಾನುಭವವನ್ನು ಕೊಡುವುದಿಲ್ಲ ಎಂದು ಹೀಗೆ ಟಿಪ್ಪಣಿ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ.

 

ಕಾದಂಬರಿಯನ್ನು ಪೂರ್ತಿ ಓದಿ ಮುಗಿಸುವ ಹೊತ್ತಿಗೆ ಲಕ್ಷ್ಮಣ ಮನಸ್ಸನ್ನು ಆವರಿಸಿಕೊಳ್ಳುತ್ತಾನೆ. ನಾನು ಓದಿದ ಕನ್ನಡ ಕಾದಂಬರಿಗಳಲ್ಲಿ ನನ್ನ ಮೆಚ್ಚಿನ ಪಾತ್ರ ಉತ್ತರಕಾಂಡದ ಲಕ್ಷ್ಮಣ. ನಿಜವಾಗಿಯೂ ಲಕ್ಷ್ಮಣ ಎಂಬುವವನಿದ್ದರೆ ಅವನು ಇಂತವನೇ ಆಗಿದ್ದನಿರಬೇಕು. 


ರಾಮನನ್ನು ಹುಡುಕ ಹೊರಟಾಗ ಸೀತಿಯಿಂದ ಅವನೆದುರಿಸಿದ ಭರ್ತ್ಸನೆಯ ನುಡಿಗಳು, ಸೀತೆಯನ್ನು ಬಿಟ್ಟು ಬಂದುದಕಾಗಿ ಆತ ರಾಮನಿಂದ ತಲೆ ಬಗ್ಗಿಸಿಕೊಂಡು ಕೇಳಿದ ಮಾತುಗಳು, ಅಗ್ನಿ ಪ್ರವೇಶಕ್ಕೆ ಹೊರಟ ಸೀತೆಯ ರಟ್ಟೆ ಹಿಡಿದು ರಾಮನ ಕುರಿತು ಅವನಾಡುವ ಮಾತುಗಳು, ಸೀತೆಯನ್ನು ವಾಲ್ಮೀಕ್ಯಾಶ್ರಮಕ್ಕೆ ಬಿಟ್ಟು ಬಂದಮೇಲೆ ಅವನು ತೆಗೆದುಕೊಂಡ ನಿರ್ಧಾರಗಳು ಒಂದೊಂದೂ ಕೇವಲ ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎನ್ನಿಸುವಂತವು. 



Sunday, September 10, 2023

ಈ ಕ್ಷಣದ ಕವಿತೆ ೧

ಅದು,
ನಡು ರಾತ್ರಿಯಲ್ಲಿ ಯಾವುದೋ
ಹಳೆಯ ಹಾಡಿನ ಎರಡನೇ ಸಾಲು 
ನೆನಪಾದಂತೆನೀವು 
ತಾಸುಗಟ್ಟಲೆ ತಲೆಯಲ್ಲೇ 
ಹುಡುಕುತ್ತೀರಿ, ಊಹ್ಞೂಂ

ಯಾವುದೋ ಗಡಿಬಿಡಿಯ 
ಗಲಿಬಿಲಿಯಲ್ಲಿ
ಮೊದಲು ಸಾಲು ಧುತ್ತನೆ
ಸಾಕ್ಷಾತ್ಕಾರವಾಗುತ್ತದೆ
ಎರಡು, ಮೂರನೇ ಸಾಲು
ಅಸ್ಪಷ್ಟ ಎನಿಸಿದರೂ
ನಿಮಗೆ ಜ್ಞಾನೋದಯದ ಸಂತಸ

ಒಂದರಘಳಿಗೆಯಷ್ಟೇ
ಸಂತೆಯಲ್ಲಿ ಮಗನನ್ನು ಕಳೆದುಕೊಂಡಂತೆ
ಅದರ ರಾಗಕ್ಕಾಗಿ ತಡಕಾಡುತ್ತೀರಿ
ಗಂಟಲಲ್ಲಿರುವ ಕೆಲವು ಅಸ್ಪಷ್ಟ, ಪರಿಚಿತ
ಟ್ಯೂನುಗಳ ಜೊತೆ, 
ಹೊಸಹಾಡನ್ನು ಮಲಗಿಸಿ 
ತಾಳೆಮಾಡುತ್ತೀರಿ
ಊಹ್ಞೂಂ.

ಕೊನೆಯುಸಿರಿನ ಘಳಿಗೆಯಲ್ಲೂ
ನಿಮಗದರ ರಾಗ ಹೊಳೆದೀತು
ಆದರೆ,
ಅದನ್ನು ಹಾಡಿದವರಾರು?

ಈ ಕ್ಷಣದ ಕವಿತೆ ೨

ಅವಳ ಕಣ್ಣುಗಳಲ್ಲಿ
ವೈಶಾಖ ಸೋರಗುತ್ತದೆ
ಬಾಯಾರಿದ ಒಣ ಭೂಮಿಯಂತೆ
ನಾನು ಆಕಾಶ ನೋಡುತ್ತೇನೆ
ಅವಳ ಕಣ್ರೆಪ್ಪೆ ಅಡ್ಡಬರುತ್ತದೆ

ಕ್ರೂರ ಮೇ ಬಿಸಿಲು ಫಳಫಳಿಸುತ್ತದೆ
ಅವಳ ಕಣ್ಣುಗಳಲ್ಲದು ಪ್ರತಿಫಲಿಸುತ್ತದೆ
ಅವಳು ಸೂರ್ಯನನ್ನು ನೆಟ್ಟ ಕಂಗಳಲ್ಲಿ
ನೋಡಿ ಅಣಕಿಸುತ್ತಾಳೆ

ನಾನು ಅವಳನ್ನು ನೋಡುತ್ತಾ
ಬೆವರೊರೆಸಿಕೊಳ್ಳುತ್ತೇನೆ
ಅವಳು ರೆಪ್ಪೆ ಮುಚ್ಚಿ ತೆಗೆಯುವುದರೊಳಗೆ,
ಮತ್ತೆ ವೈಶಾಖದ ಸುಡುಬಿಸಿಲು
ನನ್ನಮೇಲೆ ದಾಳಿಯಿಡುತ್ತದೆ

ನಾನು ಮರಳಿನ ಮೇಲೇನೋ 
ಬರೆಯಬೇಕೆಂದುಕೊಳ್ಳುತ್ತೇನೆ,
ಅವಳು ಕೋಪಿಸಿಕೊಳ್ಳುತ್ತಾಳೆ
ಅರೆಕ್ಷಣ,
ಇಬ್ಬರಿಗೂ ಜ್ಞಾನೋದಯವಾಗುತ್ತದೆ
ಅವಳು ಬರೆಯಲು ಹೇಳುತ್ತಾಳೆ
ನಾನು ಬರೆಯುವುದಿಲ್ಲ.

ಈ ಕ್ಷಣದ ಕವಿತೆ ೩

ವೈಶಾಖದ ಮಳೆ
ಮಳೆಗಾಲದ ನೆನಪುಗಳ ಎಚ್ಚರ ಅದು
ಇದು ದೊಡ್ಡ ಹನಿಯೋ ಸಣ್ಣ ಹನಿಯೋ ತಿಳಿಯದಂಥ ದ್ವಂದ್ವ
ಕಳೆದ ಮಳೆಗಾಲಗಳ ಅಸ್ಪಷ್ಟ ಪ್ರತಿನಿಧಿ

ವೈಶಾಖದ ಮಳೆ
ಹಸಿಮೆಣಸು ತಿಂದಾಗ ಸಿಕ್ಕ ಸಿಹಿನೀರು
ಅದು ಆರ್ದ್ರ
ಅದೊಂದು ಸಚಿತ್ರ ವಿಸ್ಮಯ

ವೈಶಾಖದ ಮಳೆ
ಒಂದು ಬಿಡುಗಡೆಯ ಆಸೆ
ಅದು ತೀರಲು ಶುರುವಾದ ಆದರೆ ತೀರದ ದಾಹ

ವೈಶಾಖದ ಮಳೆ 
ಸುಡುವ ನಡು ಮಧ್ಯಾಹ್ನಗಳಿಂದ ನಮ್ಮನ್ನೊಂದುಕ್ಷಣ ಕಾಯುವ
ಆದರೆ ಮತ್ತದೇ
ಬೇಗೆಯ ಪ್ರಪಂಚಕ್ಕೆ ದೂಡಿ ಓಡಿಹೋಗುವ ನಿರ್ದಯ ಕ್ರೂರಿ

ಈ ಕ್ಷಣದ ಕವಿತೆ ೬

ನನ್ನ ಬಳಿ ಒಂದು 
ಕವಿತೆಯಿದೆ.
ಬಹಳ ಇಷ್ಟದಲ್ಲಿ
ಸಾಕಿ ಬೆಳೆಸಿದ ಕವಿತೆಯದು.

ಸೆಖೆಗಾಲದಲ್ಲಿ
ಅಚಾನಕ್ಕು ಮಳೆಯಾದಾಗ,
ಮರಳಮೇಲೆ ಕುಳಿತು
ತಾಸುಗಟ್ಟಲೆ
ಅಲೆಗಳು ಒಂದಾದಮೇಲೊಂದು
ಬಂದುಹೋಗುವುದನ್ನು ಕಾಣುವಾಗ,
ಕಣ್ಮುಚ್ಚಿ ಮುಲ್ತಾನಿಯಲ್ಲೋ, ಶುದ್ಧ ಕಲ್ಯಾಣದಲ್ಲೋ ಕಳೆದುಹೋದಾಗ,
ಮಳೆಗಾಲ ಕಳೆದ 
ಶುಭ್ರಮುಗಿಲಿನ ನಗು ಕಂಡಾಗ,
ಆಕೆ ನಿರಾಯಾಸವಾಗಿ
ಕೂದಲನ್ನು ಮೇಲಕ್ಕೆತ್ತಿ ಗಂಟಿಕ್ಕಿ
ನಕ್ಕಾಗ,
ಹೀಗೆ ಆಗಾಗ 
ಅದು ಇಂಚಿಂಚು ಬೆಳೆದು
ಚಂದವಾಗಿದೆ.

ನನ್ನಬಳಿ ಒಂದು ಚಂದದ
ಕವಿತೆಯಿದೆ
ಹಳೆಗಾಲದ ಕಥೆಗಳ ಹಾಗೆ
ಏಳು ಸುತ್ತಿನ ಕೋಟೆಯೊಳಗಿನ
ಪಂಜರದಲ್ಲಿ ಮಾಂತ್ರಿಕನ
ಜೀವದ ಗುಟ್ಪು ಇರುವಹಾಗೇ
ಈ ಕವಿತೆಯೊಳಗೇ 
ನನ್ನ ರಹಸ್ಯವಿದೆ

ನನ್ನ ಬಳಿ ಒಂದು 
ಕವಿತೆಯಿದೆ
ಆದರೆ
ನಾನದನ್ನು ಯಾರಿಗೂ
ಕೊಡಲಾರೆನಷ್ಟೇ.