Thursday, March 12, 2020

ಯುದ್ಧ-ಶಾಂತಿ

    "ಈ ಭೂಮಿ ಹುಟ್ಟುವಾಗಲೇ ಈ ಗಡಿಗಳೆಲ್ಲ ಇದ್ದಿತ್ತಾ?" ಅವನ ಪುಟ್ಟ ಮಗಳು ಹಿಂದೊಮ್ಮೆ ಕೇಳಿದ ಪ್ರಶ್ನೆ ಇದು. ಅವನಿನ್ನೂ ಅದಕ್ಕೆ ಉತ್ತರವನ್ನು ಹುಡುಕುವ ಧೈರ್ಯ ಮಾಡಿಲ್ಲ. ಅವನಿಗೆ ಗೊತ್ತಿರುವ ಉತ್ತರ ಅವನಿಗೆ ಯಾವಾಗಲೂ ಕಸಿವಿಸಿ ಉಂಟುಮಾಡುತ್ತದೆ.
        ದೇಶಕ್ಕೆ ಅವನೊಬ್ಬ ಸೈನಿಕ,ಅಥವಾ ಸೈನಿಕನಾಗಿರಲು ಅವನಿಗೊಂದು ದೇಶವಿದೆ. ಗಡಿಯ ಹತ್ತಿರವೇ ಅವನ ಮನೆ. ಕುಟುಂಬದ ಜೊತೆಗೇ ಅವನು ವಾಸವಿದ್ದ.
        ಶತ್ರು ದೇಶದ ಜೊತೆಗೆ ಯುದ್ಧ ಶುರುವಾಯಿತು. ಬೆಳಗಾದರೆ ಯುದ್ಧಕ್ಕೆ ಹೋಗುವುದು, ರಾತ್ರಿ ಮನೆಗೆ ಬರುವುದು ಮಾಡುತ್ತಿದ್ದ. ಮನೆಯಲ್ಲಿ ಅವನಿಗೆ ಬಹಳ ಗೌರವ. ಅವನ ತಮ್ಮ, ಅಣ್ಣ, ಹೆಂಡತಿ, ಮಕ್ಕಳು ಎಲ್ಲಾ ಅವನನ್ನು ಬಹಳ ಗೌರವಿಸುತ್ತಿದ್ದರು. ಯುದ್ಧ ಶುರುವಾದಮೇಲಂತೂ ಅದು ಜಾಸ್ತಿಯಾಯಿತು, ಎಷ್ಟೆಂದರೂ ಆತ ದೇಶಸೇವೆ ಮಾಡುತ್ತಿದ್ದ. ಮನೆಯ ಹೊರಗೆ ಎಂತದ್ದೇ ಬಾಂಬು,ಗುಂಡುಗಳ ಸದ್ದಿದ್ದರೂ ಮನೆಯೊಳಗೆ ಶಾಂತಿಯಿತ್ತು.
        ಯುದ್ಧ ತಿಂಗಳುಗಳ ಕಾಲ ಮುಂದುವರಿಯಿತು. ಎರಡೂಕಡೆ ಬಹಳ ಹಾನಿಯಾಯಿತು. ಅವನ ದೇಶದ ಸಾವಿರಾರು ಸೈನಿಕರು ಸತ್ತರು. ಯಾರ ದುರಾದೃಷ್ಟವೋ ಎಂಬಂತೆ ಅವನೂ ಸತ್ತು ಹೋದ!
        ಯುದ್ಧ ಮುಗಿಯಿತು, ಅವನ ದೇಶ ಗೆದ್ದಿತ್ತು. ದೇಶದಲ್ಲಿ ಸಂಭ್ರಮ ಮನೆಮಾಡಿತು.
        ಇದಾದ ಕೆಲವು ದಿನಗಳಲ್ಲಿ ಅವನ ಮನೆಯ ವಾತಾವರಣ ಸಂಪೂರ್ಣ ಬದಲಾಯಿತು. ಅವನ ಅಣ್ಣ ತಮ್ಮಂದಿರು ಅವನ ಹೆಂಡತಿ ಮಕ್ಕಳನ್ನು ಮನೆಯಿಂದ ಹೊರಹಾಕಿದರು. ಅವರವರಲ್ಲೇ ಮನಸ್ತಾಪ ಶುರುವಾಗಿ ಶಾಂತಿ ಇಲ್ಲದಾಯಿತು.
        ಯುದ್ಧ ಮುಗಿದು ದೇಶದಲ್ಲಿ ಶಾಂತಿ ನೆಲೆಸಿದರೂ, ಅವನ ಮನೆಯಲ್ಲೇ ಯುದ್ಧ ಪ್ರಾರಂಭವಾಗಿತ್ತು.
        ಈಗ ಹೇಳಿ ಅಂತರಂಗದ ಯುದ್ಧ-ಶಾಂತಿಗಳಿಗೆ ಯಾವುದರ ಹಂಗಿದೆ?

2 comments: